ನರಸಿಂಹರಾಜಪುರ: ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಲಕೊಪ್ಪ ರಬ್ಬರ್ ತೋಟದಲ್ಲಿ 2 ಜಿಂಕೆಯನ್ನು ಕೊಂದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿ 4 ಮಂದಿ ಆರೋಪಿಗಳ ಮೇಲೆ ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.ಕೆ.ನಾಗೇಂದ್ರ ಎಂಬುವರ ರಬ್ಬರ್ ತೋಟದಲ್ಲಿ ಸೆ.3ರಂದು 2 ಜಿಂಕೆಯನ್ನು ಕೊಂದು, ಅದರ ತಲೆ, ಚರ್ಮ ಹಾಗೂ ದೇಹದ ಕೆಲವು ತುಣುಕುಗಳನ್ನು ರಬ್ಬರ್ ಚೀಲದಲ್ಲಿ ಕಟ್ಟಿ ಪಕ್ಕದ ತೋಟದ ಬಾವಿಗೆ ಹಾಕಲಾಗಿತ್ತು. ಪಕ್ಕದ ತೋಟದ ಬಾವಿಯಲ್ಲಿ ಸೆ.6ರಂದು ದುರ್ವಾಸನೆ ಬಂದಿದ್ದರಿಂದ ಮಾಲೀಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಇಲಾಖೆ ಸಿಬ್ಬಂದಿ ಬಾವಿಯಿಂದ ಚೀಲ ತೆಗೆದು ನೋಡಿದಾಗ ಜಿಂಕೆಯ ತಲೆ, ಚರ್ಮ, ಸಿಕ್ಕಿದೆ. ಬಳಿಕ ನಾಲ್ವರು ಆರೋಪಿಗಳು ಜಿಂಕೆಯನ್ನು ಬಂದೂಕಿನಿಂದ ಕೊಂದಿರುವುದು ಖಚಿತವಾಗಿದೆ.ಆರೋಪಿ, ಮುಂಡುಗೋಡು ಸತ್ಯನಾರಾಯಣ ಎಂಬುವರನ್ನು ಬಂಧಿಸಿ ತನಿಖೆ ನಡೆಸಿದಾಗ ಉಳಿದ ಮೂವರು ಆರೋಪಿಗಳು ಜಿಂಕೆ ಹತ್ಯೆಯಲ್ಲಿ ಬಾಗಿಯಾಗಿರುವುದಾಗಿ ತಿಳಿಸಿದ್ದಾನೆ. ಸತ್ಯನಾರಾಯಣ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಗಳಾದ ಕೆ.ಕಣಬೂರು ಗ್ರಾಮದ ಕೆ.ನಾಗೇಂದ್ರ, ರಾಜೇಂದ್ರ, ಸಾತ್ವಿಕ್ ಮೇಲೆ ಪ್ರಕರಣ ದಾಖಲಾಗಿದೆ.ಕೊಪ್ಪ ಡಿಎಫ್‌ಒ ಎಲ್.ನಂದೀಶ್ ಮಾರ್ಗದರ್ಶನ, ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಪ್ರವೀಣ್ ನೇತೃತ್ವದಲ್ಲಿ ಮುತ್ತಿನಕೊಪ್ಪ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮಾರುತಿ ಮಾಳಿ, ಉಪ ವಲಯ ಅರಣ್ಯಾಧಿಕಾರಿಗಳಾದ ಅರುಣಕುಮಾರ ಬಾರಂಗಿ, ಅಕ್ಷತಾ, ಕೆ.ಕಣಬೂರು ಗಸ್ತು ಅರಣ್ಯ ಪಾಲಕರಾದ ಸತೀಶ್, ಜಯಣ್ಣ, ಶ್ರೀಶೈಲ ನಾವಿ, ಬಲರಾಂ ಗೌಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *