

– ಪೊಲೀಸರೆ ಪುಡಿ ರೌಡಿಗಳಾದರ?- ಗಾರ್ಡರ ಗದ್ದೆ ಗ್ರಾಮಸ್ಥರಿಂದ ಅಕ್ರೋಶ
ತೀರ್ಥಹಳ್ಳಿ : ಆಗುಂಬೆ ಹೋಬಳಿಯ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗಾರ್ಡರಗದ್ದೆ ಯಲ್ಲಿ ಅಮಾಯಕ ಯುವಕನ ಮೇಲೆ ಆಗುಂಬೆ ಪೊಲೀಸರು ಹಲ್ಲೆ ನಡೆಸಿದ ಆರೋಪ ಸ್ಥಳೀಯರಿಂದ ಕೇಳಿಬಂದಿದ್ದು ಇದರ ಜೊತೆಗೆ ಲಂಚದ ಆರೋಪ ಕೂಡ ಇದ್ದು,ಕಾಯುವ ಆರಕ್ಷಕರೇ ರಾಕ್ಷಸರಾದ ಘಟನೆ ನಡೆದಿದೆ. ಅ 21 ರ ಮಂಗಳವಾರ ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಹುರುಳಿ- ಗಾರ್ಡರಗದ್ದೆ ಯಲ್ಲಿ ದೀಪಾವಳಿ ಹಬ್ಬದಲ್ಲಿ ಕೋಳಿ ಜೂಜಾಟ ನಡೆಯುತ್ತಿದೆ ಎಂಬ ಸುಳ್ಳು ಮಾಹಿತಿ ಮೇರೆಗೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಗುಂಬೆ ಠಾಣಾಧಿಕಾರಿ ಮತ್ತಿತರ 7 ರಿಂದ 8 ಮಂದಿ ಪೊಲೀಸ್ ಕಾನ್ಸ್ಟೇಬಲ್ ಗಳನ್ನೊಳಗೊಂಡ ತಂಡ ಮನೆಯೊಂದರ ಮೇಲೆ ಧಾಳಿ ನಡೆಸಿತ್ತು.

ಆದರೆ ಕೋಳಿ ಜೂಜು ನಡೆಯುತ್ತಿರುವ ಯಾವುದೇ ಕುರುಹು ಸಿಗದೆ ಹಾತಾಶರಾದ ಪೊಲೀಸರು ಮನೆಯ ಹೆಂಗಸರು ಮಕ್ಕಳ ಮೇಲೆ ದೌರ್ಜನ್ಯ ನಡೆಸಲು ಮುಂದಾಗಿದ್ದಲ್ಲದೆ ಮನೆಯಲ್ಲಿ ನಿಂತ ಬೈಕ್ ಗಳು ಯಾರವು ಎಂದು ತಗಾದೇ ತೆಗೆದಿದ್ದಾರೆ ಇದನ್ನು ಪ್ರಶ್ನಿಸಲು ಹೋದ ಊರಿನ ಅಮಾಯಕ ಯುವಕನೊಬ್ಬನ ಮೇಲೆ ಠಾಣಾಧಿಕಾರಿ ಮತ್ತವರ ಪಿಸಿ ಗಳ ತಂಡ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದು, ಆತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾತ್ರವಲ್ಲದೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದೀಯ ಮತ್ತು ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದೀಯ ಎಂದು ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಸಿ ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಸ್ಥಳೀಯ ಮುಖಂಡರು ಮತ್ತು ಗ್ರಾಮಸ್ತರು ಠಾಣೆ ಮುಂದೆ ಜಮಾಯಿಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿ ಪ್ರತಿಭಟನೆಯ ಬಿಸಿ ಮುಟ್ಟಿಸುತ್ತಿದ್ದಂತೆ ತಮ್ಮ ತಪ್ಪಿನ ಅರಿವಾಗಿ ಯುವಕನನ್ನು ಬಿಟ್ಟು ಕಳಿಸಿರುವುದು ವರದಿಯಾಗಿದೆ. ರಕ್ಷಕರಾಗಬೇಕಾದ ಆರಕ್ಷಕರೇ ತಮ್ಮ ಕರ್ತವ್ಯ ಮರೆತು ರಾಕ್ಷಸರಂತೆ, ಪುಡಿ ರೌಡಿಗಳಂತೆ ವರ್ತಿಸಿದರೆ ಜನರಿಗೆ ರಕ್ಷಣೆ ಕೊಡುವವರು ಯಾರೆಂದು ಪ್ರಶ್ನಿಸುತ್ತಿದ್ದಾರೆ, ಜನರು ಇಲಾಖೆಯ ಮೇಲೆ ನಂಬಿಕೆ ಕಳೆದುಕೊಂಡು ದಂಗೆ ಏಳುವ ಮುನ್ನ ಇಲಾಖೆಯಲ್ಲಿನ ಸಂಬಂಧ ಪಟ್ಟ ಮೇಲಾಧಿಕಾರಿಗಳು ಎಚ್ಚೆತ್ತುಕೊಂಡು ದರ್ಪ ಮೆರೆಯುತ್ತಿರುವ ಆಗುಂಬೆ ಠಾಣೆಯ ಠಾಣಾಧಿಕಾರಿ ಮತ್ತವರ ರೌಡಿ ಪಿಸಿ ಗಳ ಮೇಲೆ ಕ್ರಮ ಕೈಗೊಳ್ಳ ಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

