
ಶಿವಮೊಗ್ಗ : ಖೈದಿಯೊಬ್ಬನಿಗೆ ತಲುಪಿಸಲು ಸ್ವೀಟ್ ಬಾಕ್ಸ್ನಲ್ಲಿ ಗಾಂಜಾ ತಂದಿದ್ದ ಯುವಕನೊಬ್ಬ ಜೈಲುಪಾಲಾಗಿದ್ದಾನೆ. ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ತಪಾಸಣೆ ವೇಳೆ ಯುವಕ ಸಿಕ್ಕಿಬಿದ್ದಿದ್ದು ಆತನ ವಿರುದ್ಧ ಪ್ರಕರಣ ದಾಖಲಾಗಿದೆ.ಶಿವಮೊಗ್ಗದ ಸೋಮಿನಕೊಪ್ಪದ ಸೈಯದ್ ವಾಸೀಂ (25) ಬಂಧಿತ. ಬೇಕರಿಯಿಂದ ತಂದಿದ್ದ ಸ್ವೀಟ್ ಬಾಕ್ಸ್ನಲ್ಲಿ ಗಾಂಜಾ ಅಡಗಿಸಿಟ್ಟುಕೊಂಡು ತಂದಿದ್ದ.

ಕೇಂದ್ರ ಕಾರಾಗೃಹದ ಖೈದಿ ಮೆಹಬೂಬ್ ಖಾನ್ ಎಂಬಾತನನ್ನು ಮಾತನಾಡಿಸಲು ಸೈಯದ್ ವಾಸೀಂ ಎಂಬಾತ ಆಗಮಿಸಿದ್ದ. ಖೈದಿ ಮೆಹಬೂಬ್ ಖಾನ್ಗೆ ನೀಡಲು ಸ್ವೀಟ್ ಬಾಕ್ಸ್ ತಂದಿದ್ದ. ಜೈಲು ಪ್ರವೇಶ ದ್ವಾರದಲ್ಲಿ ಕೆಎಸ್ ಐಎಸ್ ಎಫ್ ಭದ್ರತಾ ಸಿಬ್ಬಂದಿ ಸ್ವೀಟ್ ಬಾಕ್ಸ್ ತಪಾಸಣೆ ನಡೆಸಿದರು. ಅದರಲ್ಲಿ ಗಾಂಜಾ ಪತ್ತೆಯಾಗಿದೆ ಎಂದು ಆರೋಪಿಸಲಾಗಿದೆ.

ಕೆಎಸ್ ಐಎಸ್ ಎಫ್ ಸಿಬ್ಬಂದಿ ಸೈಯದ್ ವಾಸೀಂನನ್ನು ವಶಕ್ಕೆ ಪಡೆದಿದ್ದಾರೆ.ಘಟನೆ ಸಂಬಂಧ ಜೈಲು ಮುಖ್ಯ ಅಧೀಕ್ಷಕಿ ಪ್ರೀತಿ ದೂರು ನೀಡಿದ್ದು, ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

