
ತೀರ್ಥಹಳ್ಳಿ : ತಾಲೂಕಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 2 ಕೋಟಿ 57 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆಯನ್ನು ಮಾರ್ಚ್ 2 ರಂದು ಶಾಸಕ ಆರಗ ಜ್ಞಾನೇಂದ್ರ ಹಾಗೂ ಮಲೆನಾಡು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡ, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರತ್ನಕರ ಶೆಟ್ಟಿ, ಉಪಾಧ್ಯಕ್ಷರಾದ ಗೀತಾ ರಮೇಶ್, ಮುಖ್ಯಧಿಕಾರಿ ನಾಗರಾಜ್ ಸೇರಿದಂತೆ ಪಟ್ಟಣ ಪಂಚಾಯಿತಿಯ ಸದಸ್ಯರು ನೆರವೇರಿಸಿದರು.

ಯಾವೆಲ್ಲಾ ಕಾಮಗಾರಿಗಳಿಗೆ ಶಂಕು ಸ್ಥಾಪನೆ * ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ನಿಧಿ ಅನುದಾನದಲ್ಲಿ ವಿವಿಧ ಕಾಮಗಾರಿಗಳು (1 ಕೋಟಿ 20 ಲಕ್ಷ)* ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸೊಪ್ಪಗುಡ್ಡೆಯಲ್ಲಿರುವ ಸಾಂಸ್ಕೃತಿಕ ಮೈದಾನದಲ್ಲಿ “ಕುವೆಂಪು ಬಯಲು ರಂಗಮಂದಿರ” ನಿರ್ಮಾಣ ಮಾಡಲು ಹಾಗೂ ಮೈದಾನದ ಸುತ್ತ ರಿಟೈನಿಂಗ್ ವಾಲ್ ಮತ್ತು ರಂಗಮಂದಿರಕ್ಕೆ ವಿದ್ಯುತೀಕರಣ ನಿರ್ಮಾಣ ಕಾಮಗಾರಿ (80 ಲಕ್ಷ)* ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೆಟ್ಟಮಕ್ಕಿ 110/11 ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಬಾಳೇಬೈಲು ನೀರು ಶುದ್ದೀಕರಣ ಕೇಂದ್ರ ಸ್ಥಾವರಕ್ಕೆ 11 ಕೆ.ವಿ ಎ.ಬಿ ಕೇಬಲ್ (Express Line) ಅಳವಡಿಸುವ ಕಾಮಗಾರಿ (32.20 ಲಕ್ಷ)* ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ-14 ರ ಕುರುವಳ್ಳಿಯಲ್ಲಿ ವಾಟರ್ ಟ್ಯಾಂಕ್ ನಿರ್ಮಾಣ (25 ಲಕ್ಷ)

ಆರಗ ಜ್ಞಾನೇಂದ್ರ ಮಾತನಾಡಿ ನಮ್ಮ ತೀರ್ಥಹಳ್ಳಿಯಲ್ಲಿ 2 ಕೋಟಿ 57ಲಕ್ಷದ ಕಾಮಗಾರಿ ಹಾಗೂ ಶಂಕು ಸ್ಥಾಪನೆ ಮಾಡಿದ್ದು ಜೊತೆಗೆ ಈ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದು ಬಹಳ ಖುಷಿ ತಂದಿದೆ. ಬಯಲು ರಂಗಮಂದಿರ ಆಗ್ಬೇಕು ಅನ್ನೋದು ನಮ್ಮ ಬಯಕೆ ಕೂಡ ಅದು ಕಾರ್ಯ ರೂಪಕ್ಕೆ ಬಂದಿದೆ. ತೀರ್ಥಹಳ್ಳಿಯಂತ ಊರಿಗೆ ಇದೆಲ್ಲವೂ ಅಗತ್ಯವಿದೆ. ಮುಂದೆಯೂ ನಿಮ್ಮೊಂದಿಗೆ ಇರ್ತೀವಿ ಎಲ್ಲರೂ ಒಗ್ಗಟಾಗಿ ಅಭಿವೃದ್ಧಿಗಾಗಿ ಶ್ರಮಿಸೋಣ.
ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡ ಮಾತನಾಡಿ ಕುವೆಂಪು ಅವರ ನೆನಪಿಗಾಗಿ ಕುವೆಂಪು ಬಯಲು ರಂಗಮಂದಿರ ಆಗುತ್ತಿದೆ. ಲಂಡನ್ ನಲ್ಲಿ ಶೇಕ್ಸ್ ಪಿಯರ್ ಅವರ ರಂಗಮಂದಿರ ನೋಡಿದ್ದೇ ಬಹಳ ಚೆಂದವಿದೆ. ಹಾಗೆ ಇಲ್ಲೂ ಸಹ ಮಾಡಬೇಕು. ಪಕ್ಷವನ್ನು ಬಿಟ್ಟು ಕೆಲಸ ಮಾಡಬೇಕು.ತಾಲೂಕಿನಲ್ಲಿ ಹಲವಾರು ಕಾಮಗಾರಿಗಳು ಆಗುತ್ತಿವೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಅನುಕೂಲ ಆಗುವಂತೆ ಕೆ ಎಂ ಎಫ್ ವತಿಯಿಂದ ಸ್ಟಾಲ್ ಹಾಗೆ ಕೋರ್ಟ್ ಆವರಣದಲ್ಲಿ ವಾಹನ ಪಾರ್ಕಿಂಗ್ ಮಾಡಲು ಶೇಡ್ ಹಾಗೂ ಸ್ಟಾಲ್ ಮಾಡಬೇಕು ಎಂದಿದ್ದಾರೆ ಅದು ಸಹ ಶೀಘ್ರದಲ್ಲಿ ಆಗಲಿದೆ ಎಂದರು.


