

ಶಿವಮೊಗ್ಗ : ರಾಜ್ಯದಾದ್ಯಂತ ಶಾಲೆಗಳು ಆರಂಭಗೊಳ್ಳಲಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ಸರ್ಕಾರಿ ಶಾಲೆಗಳಿಗೆ ತೆರಳಿ ಮಕ್ಕಳನ್ನು ಸ್ವಾಗತಿಸಿಕೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲಾ ಆರಂಭೋತ್ಸವದ ದಿನದಂದೇ ಎಲ್ಲ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ ವಿತರಿಸಲಾಗುತ್ತದೆ.

ಶೂ, ಸಾಕ್ಸ್ ಹಂತಹಂತವಾಗಿ ಶಾಲೆಯಲ್ಲಿ ವಿತರಿಸಲಾಗುತ್ತಿದೆ. ಅದಕ್ಕೂ ಒಂದು ಕಠಿಣ ಕಾನೂನು ರೂಪಿಸಿ ಶಾಲಾ ಆರಂಭದಲ್ಲೇ ಮಕ್ಕಳಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ರಾಜ್ಯದಲ್ಲಿ ಡಿಡಿಪಿಐ, ಬಿಇಒಗಳ ಕೊರತೆ ಇದೆ. ಪದೋನ್ನತಿ ನೀಡಿ ನೇಮಕ ಮಾಡಬೇಕಾಗಿದೆ. ಸ್ಥಾನಗಳ ಸಂಖ್ಯೆಯಲ್ಲಿ ಏರುಪೇರಾಗಬಹುದು. ಉಸ್ತುವಾರಿ ಸಚಿವರ ಶಿಫಾರಸು ಪಡೆದುಕೊಂಡು ನೇಮಕ ಮಾಡಲಾಗುತ್ತದೆ. ಕಲಿಕಾ ಬಂಧ, ಸೇತುಬಂಧ ಸಂದರ್ಭದಲ್ಲಿ ಡಿಡಿಪಿಐ ನೇಮಕ ಮಾಡಲಾಗುವುದು ಎಂದು ಶಿಕ್ಷಣ ಸಚಿವರು ಹೇಳಿದರು.


