
ಶಿವಮೊಗ್ಗ : ಜಿಲ್ಲೆಯಲ್ಲಿ ಖನಿಜ ನಿಕ್ಷೇಪಗಳ ಪತ್ತೆಗಾಗಿ ಭಾರತೀಯ ಭೂ ಸರ್ವೇಕ್ಷಣಾ ಸಂಸ್ಥೆ (ಜಿಎಸ್ಐ) ವೈಮಾನಿಕ ಸಮೀಕ್ಷೆ ನಡೆಸಿತು. ಇತ್ತೀಚೆಗಷ್ಟೇ ಹಾವೇರಿ ಜಿಲ್ಲೆಯಲ್ಲಿ ಇದೇ ಮಾದರಿಯ ಸಮೀಕ್ಷೆ ನಡೆದಿದ್ದು, ಇದೀಗ ಶಿವಮೊಗ್ಗದಲ್ಲಿಯೂ ವಿಮಾನ ಹಾರಾಟ ನಡೆಸಿರುವುದು ಕುತೂಹಲ ಮೂಡಿಸಿದೆ.

ಶಿವಮೊಗ್ಗದಲ್ಲಿ ಹಾರಾಟ ನಡೆಸಿದ ಈ ವಿಶೇಷ ವಿಮಾನವು ಮಂಗಳೂರು ಮತ್ತು ಉಡುಪಿ ಮಾರ್ಗವಾಗಿ ಶಿವಮೊಗ್ಗಕ್ಕೆ ಆಗಮಿಸಿ, ಅಲ್ಲಿಂದ ದಾವಣಗೆರೆವರೆಗೆ ಸಂಚರಿಸಿ ಮರಳಿತು. ಒಟ್ಟು ಎರಡು ಬಾರಿ ಈ ಹಾರಾಟ ನಡೆಸಲಾಗಿದ್ದು, ಭೂಮಿಯಿಂದ ಕೇವಲ 2,000 ಅಡಿ ಎತ್ತರದಲ್ಲಿ ವಿಮಾನ ಸಂಚರಿಸಿತು.

ರಾಷ್ಟ್ರೀಯ ಭೂ ಭೌತಿಕ ಮ್ಯಾಪಿಂಗ್ ಕಾರ್ಯಕ್ರಮದ ಅಡಿಯಲ್ಲಿ ಜಿಎಸ್ಐ ಈ ಕಾರ್ಯಾಚರಣೆ ಹಮ್ಮಿಕೊಂಡಿದೆ. ಅತ್ಯಾಧುನಿಕ ಉಪಕರಣಗಳನ್ನು ಹೊಂದಿರುವ ಈ ವಿಮಾನವು ಭೂಮಿಯ ಆಳದಲ್ಲಿರುವ ಚಿನ್ನ ಸೇರಿದಂತೆ ವಿವಿಧ ನೈಸರ್ಗಿಕ ಖನಿಜಗಳ ಇರುವಿಕೆಯನ್ನು ಪತ್ತೆ ಮಾಡುತ್ತದೆ. ಸ್ಯಾಟ್ಲೈಟ್ ಮೂಲಕ ದೊರೆತ ಪ್ರಾಥಮಿಕ ಮಾಹಿತಿಯನ್ನು ಆಧರಿಸಿ ಈ ಸಮೀಕ್ಷೆ ನಡೆಸಲಾಗುತ್ತಿದೆ. ಅತ್ಯಂತ ಕಡಿಮೆ ಎತ್ತರದಲ್ಲಿ ವಿಮಾನ ಹಾರಾಟ ನಡೆಸುತ್ತಿರುವುದರಿಂದ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


